Wednesday, March 25, 2020

ಯುಗಾದಿ - ಆಚರಣೆ ಅಂತರ್ಥ (Ugadi - Aacharaneya Antharartha) - 11

ಆಚರಣೆ ಅಂತರ್ಥ ದಕ್ಷಿಣಭಾರತದಲ್ಲಿ ಚಾಂದ್ರಮಾನ ಯುಗಾದಿಯನ್ನು "ಸಂವತ್ಸರ ಪ್ರತಿಪತ್" ಎಂಬುದಾಗಿ ಆಚರಿಸುತ್ತಾರೆ. ಪಕ್ಷಗಳಲ್ಲಿ ಶುಕ್ಲಪಕ್ಷವು ದೇವತೆಗಳಿಗೆ ಪ್ರಿಯವಾದದ್ದು. ಪಿತೃ ಪಕ್ಷವು ಪತೃಗಳಿಗೆ ಪ್ರಿಯವಾದುದು. ನವವರ್ಷದ ಪ್ರಥಮ ದೇವತಾ ಪೂಜೆಯೇ ಪ್ರಧಾನವಾಗಿರುವ ಯುಗಾದಿ ಶುಭಪರ್ವದ ಆಚರಣೆಗೆ ಶುಕ್ಲಪಕ್ಷವೇ ತಕ್ಕದಾದುದ್ದು. ಸೃಷ್ಟಿ ಮತ್ತು ಧಾರಣೆ ಪೋಷಣೆಗಳಿಗೆ ಅನ್ನ ಮತ್ತು ಔಷದಿಗಳು ಬೇಕು. ಆ ಔಷದಿಗಳಿಗೆಲ್ಲಾ ರಾಜನಾದ ಸೋಮ(ಚಂದ್ರ)ನು ವೃದ್ಧಿಯಾಗುವ ಪ್ರಥಮ ದಿವಸ. ಉಳಿದ ತಿಥಿಗಳಲ್ಲಿ ಚಂದ್ರನು ಅಪೂರ್ಣನಾಗಿರುತ್ತಾನೆ. ಅಥವಾ ಪೂರ್ಣನಾಗಿರುತ್ತಾನೆ. ಆರಂಭದ ದಿವಸಗಳಾಗುವುದಿಲ್ಲ. ಆದುದರಿಂದ ವರ್ಷದ ಪ್ರಥಮ ದಿನವನ್ನಾಗಿ ಚೈತ್ರ, ಶುಕ್ಲ ಪ್ರಥಮೆಯನ್ನೇ ಪರಿಗಣಿಸುವುದು ಯುಕ್ತವಾಗಿದೆ.

ಸೌರಮಾನ ಯುಗಾದಿಯಂದು ಸೂರ್ಯನು ರಾಶಿಚಕ್ರದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು ಸಂಕ್ರಾಂತಿ ಅಥವಾ ಸಂಕ್ರಮಣ ಎನ್ನುತ್ತಾರೆ. ಇವುಗಳೆಲ್ಲವೂ ಪರ್ವಗಳೇ. ಅವುಗಳಲ್ಲಿ ಮೇಷ ಸಂಕ್ರಮಣವು ಅತ್ಯಂತ ಶುಭವಾದ ಕಾಲ. ಈ ಕಾಲದಲ್ಲಿ ಹೊರಗಿನ ಸೂರ್ಯನು ರಾಶಿಯಲ್ಲಿ ಹೆಜ್ಜೆ ಹಾಕುತ್ತಿರುವಂತೆ ಸಮಕಾಲದಲ್ಲಿ ನಮ್ಮೊಳಗಿನ ಜೀವ ಸೂರ್ಯನು ಸುಷುಮ್ನೆಯ ಗ್ರಂಥಿಯೊಳಗೆ ಸಂಗಮ ಹೊಂದುತ್ತಾನೆ ಮತ್ತು ಸಮಾಧಿಯಲ್ಲಿ ಅವಗಾಹನೆ ಮಾಡಲು ತೊಡಗುತ್ತಾನೆ ಎಂಬುದು ಅನುಭವಿ ಜ್ಞಾನಿಗಳ ಮಾತು. ಆಗ ಪ್ರಾಮಾಣಿಕವಾಗಿ ಧ್ಯಾನಾಭ್ಯಾಸ ಮಾಡುವ ಸಾಧಕರಿಗೆ ಈ ಪರ್ವಕಾಲದ ಮಹಾಮೌಲ್ಯವು ಅನುಭವಕ್ಕೆ ಬರುವ ವಿಷಯಗಳಾಗಿವೆ. ನಾಡೀ ವಿಜ್ಞಾನದಲ್ಲಿ ಒಳ್ಳೆಯ ಪರಿಚಯವುಳ್ಳವರಿಗೆ ಆ ಮಹತ್ವವನ್ನು ಪ್ರಾಯೋಗಿಕವಾಗಿಯೂ ತೋರಿಸಬಹುದು ಎಂಬುದನ್ನು ಶ್ರೀರಂಗಮಹಾಗುರುಗಳು ತಿಳಿಸುತ್ತಿದ್ದರು. ಹೀಗೆ ದೇವತಾನುಗ್ರಹದಿಂದಲೂ, ಪುರುಷಪ್ರಯತ್ನದಿಂದಲೂ ಧರ್ಮ, ಅರ್ಥ, ಕಾಮ, ಮೋಕ್ಷಗಳಾದ ಎಲ್ಲಾ ಪುರಷಾರ್ಥಗಳ ಸಾಧನೆಗೂ ಹೊಂದಿಕೆಯಾಗಿ ಮಹರ್ಷಿಗಳ ಅದ್ಭುತವಾದ ಕಾಲವಿಜ್ಞಾನಕ್ಕೆ "ಯುಗಾದಿಯ" ಆಚರಣೆಯೂ ಕೈಗನ್ನಡಿಯಾಗಿದೆ. ಈ ಪವಿತ್ರ ಸ್ಮರಣೆಯಲ್ಲಿ ನಾವೆಲ್ಲರೂ ಹಬ್ಬವನ್ನು ಆಚರಿಸುವಂತಾಗಲಿ.

ಲೇಖಕರು: ಡಾII ಯಶಸ್ವಿನೀ  


To know more about Astanga Yoga Vijnana Mandiram (AYVM) please visit our Official Website, Facebook and Twitter pages